Wednesday, February 10, 2010

ಡಬ್ಬಾ ಅಂಗಡಿಯ ಗೋವಿಂದ


ಅಲ್ಲೊಂದು ವಿಶಾಲವಾದ ಆಲದಮರ ಅದರ ನೆರಳಿನಲ್ಲಿ ಎಲ್ಲರಿಗೂ ನೆರವಾಗುವ , ಎಲ್ಲರಿಗೂ ಬೇಕಾಗುವ ನಮ್ಮ ಗೋವಿಂದನ ಡಬ್ಬಾಅಂಗಡಿ ಇತ್ತು. ದಿನ ನಿತ್ಯ ನಾವು ಆ ಅಂಗಡಿ ಎದುರು ಹಾಯುತ್ತಿದ್ವಿ .ಅಲ್ಲಿಂದ ಮನೆಗೆ ಬೇಕಾದ ಪಾನ್ , ಬಾಳೆಹಣ್ಣು , ಕೆಮ್ಮಿನ ಗುಳಿಗಿ, ಕಾರ್ಡು , ರೆವಿನ್ಯು ಸ್ಟ್ಯಾಂಪ್ ಇಂಥಹ ಎಷ್ಟೋ ವಸ್ತುಗಳನ್ನು ಅಲ್ಲಿಂದ ಕೊಳ್ಳುತ್ತಿದ್ದೆವು.ಆ ಅಂಗಡಿ ಎಷ್ಟು ಚಿಕ್ಕದಿತ್ತೆಂದರೆ ಅವನು ಮೆಲ್ಲನೆ ಏಳುತ್ತಿದ್ದಾಗ ಅವನ ಅಂಗಡಿಯಲ್ಲಿರುವ ವಸ್ತುಗಳು ಅವನನ್ನು ಮಾತಾಡುಸುತ್ತಿವೆ ಏನೋ ಅನ್ನುವಹಾಗೆ ದೃಷ್ಯ ಕಾಣುತ್ತಿತ್ತು . ಅದೇ ತೂಗುವ ಗುಟ್ಕಾ ಪಾಕೀಟುಗಳು,ಶಾಂಪು ಸ್ಯಾಶೆಗಳು,ತಂತಿಯ ಚೀಲದ ಬೆಳ್ಳನೆ ಮೊಟ್ಟೆಗಳು, ಉಸಿರುಗಟ್ಟಿ ಸಾಯುತ್ತಿರುವ plastic ಚೀಲಗಳು,ಸಾಲಾಗಿ ಸೇರಿಸಿಟ್ಟ ಗಾಜಿನ ಭರಣಿಯ ತಿನಸುಗಳು.ಹೀಗೆ ಶೂನ್ಯತೆಯೇ ನಿಲುಕತೆ ಸ್ಥಳ ಆ ಅಂಗಡಿಯಲ್ಲಿತ್ತು ಗಾಳಿ ಬೇರೆ ಬೀಸುತ್ತಿದೆ ಗಾಳಿಗೆ ಕ್ಲಿಪ್ಪು ಸಡಿಲಾದ ವಾರಪತ್ರಿಕೆಗಳು,ರಕ್ಷಾಬಂದನದ ಬಗೆಬಗೆಯ ರಾಖಿಗಳು,ಭಿನ್ನ ಭಿನ್ನದ ಕೈ ವಸ್ತ್ರಗಳು ಗಾಳಿಯಲ್ಲಿ ತೂರಾಡುತ್ತಿವೆ.


ಆ ಗೋವಿಂದ ತನ್ನ ಮಾಸಿದ ಧೋತ್ರ , ಸವೆದಿರುವ ಅವನ ಕಿಸೇ ಇರುವ ಬನಿಯನ್ನು ಹಾಕಿಕೊಂಡು ಸದಾ ಬಂದು ಹೋಗುವವರನ್ನು ಮನ: ಫೂರ್ವಕವಾಗಿ ಮಾತನಾಡಸುತ್ತಿದ್ದ. ಆ ಡಬ್ಬಾ ಅಂಗಡಿಯನ್ನು ಬಿಟ್ಟರೆ ಅವನಿಗೆ ಬೇರೆ ಪ್ರಪಂಚ ಇತ್ತೊ ಇಲ್ಲೋ ನಮಗೆ ಗೊತ್ತೆ ಇರಲಿಲ್ಲ. ಆತ ಇರೋ ನಾಲ್ಕು ಚದುರಡಿಯಲ್ಲೇ ನಮ್ಮ ಸಂಸಾರ ನೌಕೆಗೆ ಬೇಕಾದ ಚಿಲ್ಲರೆ ಸರಕುಗಳನ್ನೆಲ್ಲ, ನಾವು ನಮ್ಮ ಜೀವನದಲ್ಲಿ ಬಳಸಿಕೊಳ್ಳದೆ ಇರಲು ಆಗುತ್ತಿರಲಿಲ್ಲ ತನ್ನ ಕಾಲಡಿಗೆ ಅಡಗಿಸಿಟ್ಟ ಮಾಯಾ ಪೆಟ್ಟಿಗೆಯೊಂದರಿಂದ ನಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಡುತ್ತಲೇ ಹೋಗುತ್ತಿದ್ದ ಆ ಮಾಹಾಷಯ . ಬಾಳೇಯ ಗೋನೆ ಖಾಲಿಯಾದದ್ದೇ ತಡಾ ಮತ್ತೊಂದು ಗೂಟಕ್ಕೆರುತ್ತಿತ್ತು.ನಾಲ್ಕು ಹಸಿರು ಸೀತಾಫಳ,ಪೇರು ಎದುರು ಯಾವಾಗಲೂ ಪ್ರತ್ಯಕ್ಷವಾಗುತ್ತಲೇ ಇರುತ್ತಿದ್ದವು , ನಮ್ಮ ಗೋವಿಂದನ ಅಂಡಡಿಯಲ್ಲಿರುವ ವಿಳ್ಯೆದ ಎಲೆಗಳ ರುಚಿಯೇ ಬೇರೆ ಎಂದು ನಮ್ಮಪ್ಪ ಯಾವಾಗಲು ಅನ್ನುತ್ತಿದ್ದರು , ಊಟ ಆದ ನಂತರ ಒಂದು ಸಾರಿ ಅವನ ಅಂಗಡಿಗೆ ಹೋಗಿ ಎಲೆ ತೀಂದಮೇಲೆ " ಅನ್ನ ದಾತಾ ಸುಖಿಭವ " ಅಂತಾ ಅನ್ನುತ್ತಿದ್ದರು . ಅವನ ಅಂಗಡಿಯ ಮುಂದೆಯೇ ನಮ್ಮಮ್ಮನಿಗೆ ಧನ್ಯವಾದದ ಪರಾಚೇಷ್ಟೇ ಮಾಡುತ್ತಿದ್ದರು.


ಅವನ ಅಂಗಡಿ ಎಂದರೆ ನನಗೆ ಎಲ್ಲಿಲ್ಲದ ಕುತೂಹಲ ಎಕೆಂದರೆ ಆ ಡಬ್ಬಾ - ಅಂಗಡಿಯ ಕಾಲುಗಳನ್ನೊಮ್ಮೆ ನೋಡಿ.ಅಲ್ಲಿ ವಿಚಿತ್ರ ಬಗೆಯ ಗಾಲಿಗಳಿರುತ್ತವೆ.ಈ ಗಾಲಿಗಳು ಎಲ್ಲಿಂದಲೋ ಚಲಿಸಿ ಬಂದಂತೆ ಅಥವಾ ಇನ್ನೆಲ್ಲೋ ಚಲಿಸಬಹುದಾದಂತೆಯೂ ಇರುವಿದಿಲ್ಲ.ಇವು ಈ ನೆಲದ ಈ ನಾಲ್ಕು ಬಿಂದುಗಳಲ್ಲೇ ಉದ್ಭವಗೊಂಡು ಇಲ್ಲಿಯೇ ಸ್ಥಗಿತಗೊಂಡಂತೆ,ಸ್ಥಾವರ ಮತ್ತು ಜಂಗಮಗಳ ವಿಲಕ್ಷಣ ಮಿಶ್ರರೂಪಕದಂತೆ ನಿಂತಿರುತ್ತವೆ.ಪುಟ್ಟ ಹುಡುಗನ ತಲೆಯ ಮೇಲೆ ಇಟ್ಟಿಗೆಯ ಮೇಲಿಟ್ಟಿಗೆ ಸೇರಿಸುತ್ತ ಹೋದಾಗ,ಆತನ ಸಪುರ ಕತ್ತು ವಾಲುವಂತೆ ಈ ಗಾಳಿಗಳೂ ತುಸು ವಾರೆಯಾಗಿವೆ.ಆ ಕತ್ತು ಕ್ರಮೇಣ ಎದೆಯಲ್ಲಿ ಹೂತು ಹೋಗುವಂತೆ, ಈ ಗಾಳಿಗಳೂ ನೆಲದಲ್ಲಿ ಇಳಿಯುತ್ತವೆ.ಇದೋಂದ ಬೇರು ಬಿಡದ ,ಹೊರಡದ,ಆದರೆ ಉಭಯ ಭ್ರಮೆಗಳನ್ನೂ ಹುಟ್ಟಿಸುವ,ಹೊಸ ಯುಗದ ಚಲನಹೀನ ಚಕ್ರ. ಈ ಗಾಲಿಗಳು ನಮ್ಮ ಗೋವಿಂದನನ್ನ ’ಭೂ ಕಬಳಿಕೆ’ ಪಾಪದಿಂದ ಎತ್ತಿ ಹಿಡಿಯುತ್ತವೆ.ಸರ್ಕಾರದ ಭೂ ಇಲಾಖೆಯ ಕಂಗಳಲ್ಲಿ ಅಂಗಡಿಯಲ್ಲಿ ’ಕಾಯಾದೆ ಶೀರ್’ಗೊಳಿಸುತ್ತದೆ.ಇದೊಂದು ಅತ್ಯಂತ ತಾತ್ಪೂರ್ತಿಕ ವ್ಯವಹಾರ ಎಂಬಂಥ ವಾತಾವರಣವನ್ನು ನಿರ್ಮಿಸಿಬಿಟ್ಟು ಗೂಡಂಗಡಿಯನ್ನು ಗೋವರ್ಧನದಂತೆ ಎತ್ತಿ ಹಿಡಿಯುತ್ತದೆ. ಈ ಡಬ್ಬಾ ಅಂಗಡಿಯನ್ನು ಯಾರು ತಳ್ಳಿಕೊಂಡು ಬಂದದ್ದು ನೆನಪಿಲ್ಲ, ಬಂದಿದ್ದರೂ ಅದರೊಳಗೆ ಗೋವಿಂದನನ್ನು ಇಟ್ಟುಕೊಂಡೇ ತಳ್ಳಲಾಗಿತ್ತೋ ಅಥವಾ ಇಲ್ಲಿ ಬಂದ ನಂತರ ಅವನು ಅದರೊಳಗೆ ನುಸುಳಿಕೊಂಡನೋ ಅಥವಾ ಕಂಬದಿಂದ ಹೊರಬಂದ ನರಸಿಂಹನಂತೆ ಅದರೋಳಗೆ ಪ್ರತ್ಯಕ್ಷನಾದನೋ ಇದು ಯಾರಿಗೂ ಗೋತ್ತಿಲ್ಲದ ಎಲ್ಲರೀಗೂ ಕೂತುಹಲಕಾರಿಯಾಗಿಯೇ ಉಳಿದ ಪ್ರಷ್ಣೆ .ತೆರೆದ ಅಂಗಡಿ ಅಥವಾ ಮುಚ್ಚಿದ ಅಂಗಡಿ.ಇವೇರಡೆ ನಮಗೆ ಗೋತ್ತು.ಇದರ ನಡುವಿನ ಅವಸ್ಥಾಂತರಗಳನ್ನು ನಾವು ನೋಡಿಯೇ ಇಲ್ಲ.ಅಂದರೆ ಬಾಗಿಲು ತೆರೆದು ಆತ ಅದರೋಳಾಗೆ ಹೊಕ್ಕುವುದನ್ನು,ಹೊರಗೆ ನಿಂತು ಸರಕು ಒಳಗೆ ಇಟ್ಟುಕೊಳ್ಳೂವುದನ್ನು,ಸಂಜೆ ಬಗ್ಗಿ ಹೊರಬಂದು ಸಣ್ಣ ನೀಲಿ ಬಣ್ಣದ ಬೀಗ ಹಾಕಿ ಎಳೆದೆಳೆದು ಬೀಗ ಬಿದ್ದಿದೇಯೋ ಎಂದು ನೋಡಿ ಮನೆಯ ಕಡೆ ತೆರಳುವುದನ್ನು ನಾವು ಕಂಡಿಲ್ಲ . ನಮಗ್ಯಾಕೋ ಒಂದು ವಿಚಿತ್ರ ವ್ಯಾಕುಲತೆ ಏನಾಯಿತು ಅವನಿಗೆ ಬೇನೆ ಬಿದ್ದನೆ,ಯಾರಾದರೂ ತೀರಿಕೊಂಡರೆ ಅಥವಾ ಅವನಿಗೆ ಬೇಜಾರಾಯಿತೆ ಯಾಕೆ ಇವತ್ತು ಬಂದಿಲ್ಲ, ಬಹುಷಹ ಬೇನೆ ಬಿದ್ದಿದ್ದರೆ ಅವನನ್ನು ಯಾರು ನೋಡಿಕೊಳ್ಳುತ್ತಾರೆ.ಇಂಥಾ ನೂರಾರು ಪ್ರಷ್ಣೆಗಳು ಎಲ್ಲರ ಮನದಲ್ಲಿ ಕಾಡುತ್ತಿದ್ದವು.ಮುಚ್ಚಿದ ಅಂಗಡಿಯ ವಿವ್ಹಲತೆಯನ್ನು ಈ ಗಾಲಿಗಳು ಇನ್ನೂ ದಟ್ಟವಾಗಿಸುತ್ತಿದ್ದವು.ಈ ಗಾಲಿಗಳನ್ನೂ ಆತ ಒಯ್ಯಬಹುದಾಗಿತ್ತು ತನ್ನ ಜತೆ ಅನಿಸುತ್ತಿತ್ತು.ನಿಶ್ಚಲ ಗಾಲಿಗಳ ಮೇಲಿನ ಈ ಮುಚ್ಚಿದ ಗೂಡು,ಕಂಬಕ್ಕೆ ಕಟ್ಟಿ ಹಾಕಿದಲ್ಲೇ ನಿದ್ದೆ ಹೋಗಿರುವ ಅಂಬೆಗಾಲಿನ ಕೂಸಿನಂತೆ ಕಾಣುತ್ತಿದೆ ಇಂದು ,ಈಗ ಚಕ್ರಗಳ ನಿಶ್ಚಲತೆಯೇ ಅದರ ಶಕ್ತಿಯಾಗಿದೆ.


ಎಲ್ಲ ಬಗೆಯ ಕಳ್ಳರು ಲೂಟಿಕೋರರು ಈ ದಾರಿಯಲ್ಲೇ ಇದ್ದಾರೆ.ಆದರೆ ಯಾರಿಗೂ ಈ ಪುಟ್ಟ ಬೀಗ ಮುರಿಯುವ ಧೈರ್ಯವಿಲ್ಲ.ಗೂಡನ್ನೇ ತಳ್ಳಿಕೊಂಡು ಒಯ್ಯುವ ಸ್ಥೈರ್ಯವೂ ಇಲ್ಲ.ಏಕೆಂದರೆ ಇಡೀ ಕೇರಿಯ ನಿತ್ಯದ ಸಾಂಸಾರಿಕತೆಯ ಅಮೂರ್ತ ಸೆಲೇಗಳೇ ಈ ಸಣ್ಣ ಕತ್ತಲ ಪೋಟ್ಟಣದಲ್ಲಿದೆ.ಒಂದು ಬೀಡಿ,ಒಂದು ಬಿಂದಿ,ಒಂದು ಚಿಟಕೆ ಸುಣ್ಣ,ಹತ್ತು ಪೈಸೆಯಲ್ಲಿ ಹತ್ತು ಮಕ್ಕಳು ತಿನ್ನಬಹುದಾದಷ್ಟು ನಿಂಬೆ ಪೆಪರ್ ಮಂಟಗಳು , ಆ ಚಿಕ್ಕ ಸೂಜಿ ,ಅದೇ ಆ ನಂಬರ ಆಟದ ಚೀಟಿಗಳು.ಇಷ್ಟೆಲ್ಲ ಇಕ್ಕಟ್ಟಿನ ನಡುವೆ ಪುಟ್ಟ ಅಂಗೈ ಅಗಲದ ರಾಯರ ಫೋಟೋ.ಅದರ ಪಕ್ಕ ಸದಾ ಬೂದಿಯ ಕಿರೀಟ ತೊಟ್ಟುಕೊಂಡು ಸುಗಂಧ ಬೀಸುತ್ತಿರುವ ಸೈಕಲ್ ಬ್ರ್ಯಾಂಡ ಅಗರಬತ್ತಿ, ಅದೇ ಕೋಳೆತು ದುರ್ಗಂದ ಬೀರುತ್ತಿರುವ ದಾಸಾಳ ಹೂವು .ಈಗ ಈ ಮುಚ್ಚಿದ ಗೂಡಲ್ಲಿ ಎಲ್ಲ ಹಾಗೇ ಇವೆ ಒಳಗೆ.ಎದೆಯಲ್ಲಿ ನೀರಿದ್ದರೆ ಬನ್ನಿ.ಬೀಗ ಒಡೆಯಿರಿ ನಿಮ್ಮದೆ ಮನೆಯನ್ನು ಲೂಟಿ ಮಾಡುವಿರಿ ಎಂದು ಮೌನವಾಗಿ ಲೂಟಿಕೊರರಿಗೆ ಸವಾಲ್ ಒಡ್ಡೂತ್ತಿದೆ ಈ ಡಬ್ಬಾ ಅಂಗಡಿ.


ನಿಮ್ಮ ಪಾಡಿಗೆ ನೀವು ನಡೆದು ಹೋಗುತ್ತಿದ್ದರೂ ಈ ಮುಚ್ಚಿದ ಗೂಡು ನಿಮ್ಮನ್ನು ಕಾಡುತ್ತಿದೆ.ಅದರ ಚಕ್ರಗಳು,ಉರುಳಿಲ್ಲದ ಸೇವೆಯಲ್ಲಿ ನಿಮ್ಮನ್ನು ಕೆಣಕುತ್ತಿವೆ.ಸ್ತಳದ ಅತಿಕ್ರಮಣ ಆಪಾದನೆ ಬಾರದಂತೆ ಮುನಷಿಪಾಲ್ಟಿಯ ದೃಷ್ಟಿಯಲ್ಲಿ ಇದು ನಮ್ಮತನದ ಭಾವವನ್ನು ತುಂಬುತ್ತಿದೆ.ಆದರೂ ಹೀಗೆ ಒಂದು ದಿನ ಹಳೆಯ ಮುನಷಿಪಾಲ್ಟಿಯ ಅಧಿಕಾರಿಗಳಾಂದಂಥಹ ಪವಾರ್ ಸಾಹೇಬರು ಬಂದಿದ್ದರು ಈ ಡಬ್ಬಾ ಅಂಗಡಿಯ ತನಿಖೆಗೆ ಆಗ ನಮ್ಮ ಗೋವಿಂದ ಅಧಿಕಾರಿಗಳ ಮುಂದೆ ಮೂಕನಾಗಿ ವಿಜ್ನಾಪನೆಯ ನೋಡುತ್ತಿದ್ದ, ಸಾಹೇಬ್ರ "ಖುರ್ಚಿ ಟೇಬಲ್ಲು ಸರಷ್ಕೋತ,ರೋಡ ನಡುತಂಕಾ ಹೂ ಕುಂಡ ಇಡು ನಾಟಕ ಮಾಡಿ.ತಮ್ಮ ಹೋಟೆಲ್ ಜಾಗಾ ಜಾಸ್ತಿ ಮಾಡಾವ್ರ್ನ ಹಿಡಿರಿ ನಮ್ಮಂಥಾ ಚಿಲ್ಲರ್ ಸಂಪಾದ್ನಿ ಮಾಡಾವ್ರ್ನ ಹೊಟ್ಟೀಮ್ಯಾಲೆ ಯಾಕ್ ಕಾಲ್ ಇಡ್ತಿರಿ? ಫುಟ್ ಪಾತ್ ಎಲ್ಲಾ ಕಬ್ಜಾ ಮಾಡ್ಕೋಂಡಿರೋ ಶೋರೋಮ್ ಗೋಳ್ನ ಹಿಡಿರಿ ಸಾರ . .ನಮ್ಮಾಲೆ ಯಾಕ ನಿಮ್ಮ ಕಣ್ಣು " ಅಂತ ಅಧಿಕಾರಿಗಳಿಗೆ ಪಾಠಾ ಕಲಿಸಿದಂಥಾ ಶೂರ ನಮ್ಮ ಗೋವಿಂದ. ಹೀಗೆ ಮೂಕವಾಗಿ ಎಲ್ಲರ ಸಂಸಾರದ ಒಂದು ಅಂಗವಾಗಿದ್ದ ಗೋವಿಂದ ಒಂದು ವಾರ ಆ ಡಬ್ಬಾ ಆಂಗಡಿ ಬಾಗಿಲು ತೆರೆಯಲೇ ಇಲ್ಲ ,ಇನ್ನೆಂದು ಬರದ ಹಾದಿಯನ್ನು ಅವನು ಹಿಡಿದುಬಿಟ್ಟಿದ್ದ ಆ ಎಲ್ಲ ವಸ್ತುಗಳನ್ನು , ಆ ಗಾಲಿಗಳನ್ನು ತಬ್ಬಲಿ ಮಾಡಿ ಹೊರ‍ಟುಹೋಗಿದ್ದ, ಆಮೇಲೆ ಯಾರೋ ಬಂದು ಆ ಡಬ್ಬಾ ಅಂಗಡಿಯನ್ನು ದುಡಿಕೊಂಡು ಎಲ್ಲೋ ತೆಗೆದುಕೊಂಡೂ ಹೋದರು ಅಂತ ಓಣಿಯಲ್ಲಿ ಮಾತಾಡುವುದನ್ನು ಕೇಳಿಕೆಯಲ್ಲಿ ಗೋತ್ತಾಯಿತು. ಮುಂದೆ ನಾವು ಆ ಕಡೆಗೆ ಹಾಯುವುದನ್ನು ಮರೆತುಬಿಟ್ಟೇವು, ಈ ನಡುವೆ ಯಾವಾಗೋ ಊರಿಗೆ ಹೋಗಿದ್ದಾಗ ಕಂಡು ಬಂತು ಅವನ ಮಗನಾದಂಥಹ ಅಣ್ಣಪ್ಪ ಆ ಡಬ್ಬಾ ಅಂಗಡಿಯ ಭಾರವನ್ನು ತೆಗೆದುಕೊಂಡಿದ್ದಾನೆ ಎಂದು,

ಆ ಡಬ್ಬಾ ಅಂಗಡಿಯನ್ನು ಅಣ್ಣಪ್ಪ ತನ್ನ ಪಾಲಿಗೆ ಬಂದ ಆಸ್ತಿ ಎಂದು ತಿಳಿದು ಅದರಲ್ಲೆ ತನ್ನ ವ್ಯವಸಾಯವನ್ನು ಮುಂದು ವರೆಸಿದ್ದಾನೆ , ಪ್ರತಿಯೋಂದು ಓಣಿಯಲ್ಲಿ ದೊಡ್ಡ ದೊಡ್ಡ ಕಿರಾಣಿ ಅಂಗಡಿಯಾಗುವ ಈಗಿನ ದಿನಗಳಲ್ಲಿ ಈ ಡಬ್ಬಾ ಅಂಗಡಿಯ ಸ್ಥಾನ ಎಲ್ಲಿ ಇರಬಹುದು ಅಂತ ಒಮ್ಮೆ ಯೋಚಿಸ ಬಹುದು? ಆದರೂ ತನ್ನ ಪಾಲಿಗೆ ಬಂದ ಪಂಚಾಮೃತ ಎಂದು ಅಣ್ಣಪ್ಪ ಅದನ್ನು ತುಂಬಾ ಶೃದ್ಧೆ ಭಕ್ತಿ ಇಂದ ನಡೆಸಿಕೊಂಡು ಹೋಗುತ್ತಿದ್ದಾನೆ, ಆದರೂ ಗೋವಿಂದ ಇದ್ದ ಕಾಲದ ಅಂಗಡಿಯ ಸೋಬಗು ಈಗೀನ ಅಂಗಡಿಯಲ್ಲಿ ಕಾಣಿಬರುತ್ತಿಲ್ಲ ಈಗ ಪಾನ್ ಗಳಲ್ಲಿ ರುಚಿ ಇಲ್ಲ,ಪೇಪರನ ಪರ ಪರ ಸಪ್ಪಳ ಇಲ್ಲ,ಅವನು ತಿಂದು ಉಗಳಿದ ಗೋಡೆಯ ಮೇಲಿನ ತಂಬಾಕಿನ ಗುರುತುಗಳೀಲ್ಲ, ಒಟ್ಟಿನಲ್ಲಿ ಈ ಡಬ್ಬಾ ಅಂಗಡಿಯೂ ಸಹ ಎಲ್ಲರಹಾಗೆ ಬದಲಾಗತೋಡಗಿದೆ. "ಸಮಯ ಎಲ್ಲರನ್ನು ಬದಲಾಯಿಸುತ್ತದೆ" ಅನ್ನೋ ಮಾತಿಗೆ ಈ ಡಬ್ಬಾ ಅಂಗಡೀಯು ಕೂಡ ಉಧಾಹರಣೆಯಾಗಿದೆ.

No comments:

Post a Comment

ಧೂಳು ಕಣವಾದರೂನು ಏಳುತ್ತೆನೆ.